ಶಿಕಾರಿಪುರ ಲೈವ್:
ದೇಶವನ್ನು ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ದೇಶದ ಜನತೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ ವೈ ವಿಜಯೇಂದ್ರ ಕರೆ ನೀಡಿದರು.
ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕ ಮುಂಭಾಗ ಗುರುವಾರ ದೇಶಭಕ್ತ ಪರಿವಾರ ಆಯೋಜಿಸಿದ್ದ ತಿರಂಗಾಯಾತ್ರೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಪಹಲ್ಗಾಮ್ ನಲ್ಲಿ ಅಮಾಯಕ ಭಾರತೀಯರನ್ನು ಹತ್ಯೆ ಮಾಡಿದ ಉಗ್ರಗಾಮಿಗಳಿಗೆ ತಕ್ಕ ಪಾಠವನ್ನು ಪ್ರಧಾನಿ ನರೇಂದ್ರ ಮೋದಿ ಕಲಿಸಿದ್ದಾರೆ. ಮೋದಿ ಕರೆಯಂತೆ ಆಪರೇಷನ್ ಸಿಂಧೂರ ಮೂಲಕ ದೇಶದ ಸೈನಿಕರು ಪಾಕಿಸ್ತಾನದಲ್ಲಿರುವ ಉಗ್ರಗಾಮಿ ನೆಲೆಗಳನ್ನು ಧ್ವಂಸ ಮಾಡುವ ಕಾರ್ಯವನ್ನು ಮಾಡಿದ್ದಾರೆ. ನೂರಕ್ಕೂಹೆಚ್ಚು ಉಗ್ರಗಾಮಿಗಳನ್ನು ನಮ್ಮ ಸೈನಿಕರು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನ ಉಗ್ರಗಾಮಿ ಸಂಘಟನೆಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿದಾಗ ಮಾತ್ರ ಸಿಂಧೂ ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ ಎಂದರು.
ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬುವ ಕಾರ್ಯವನ್ನು ಪ್ರಧಾನಿ ನರೇಂದ್ರಮೋದಿ ಮಾಡಿದ್ದಾರೆ. ದೇಶದ ಭದ್ರತೆಯ ಪರವಾಗಿ ಮೋದಿ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ದೇಶವನ್ನು ಕಾಯುವ ಸೈನಿಕರಿಗೆ ನಾವು ಕೂಡ ಬೆಂಬಲ ನೀಡಬೇಕು. ಪಕ್ಷಾತೀತವಾಗಿ ದೇಶದ ಪರ ನಿಲ್ಲಬೇಕು. ಮೋದಿ ನಿರ್ಧಾರಕ್ಕೆ ಬೆಂಬಲ ನೀಡಲು ತಿರಂಗಾಯತ್ರೆ ಆರಂಭಿಸಿದ್ದೇವೆ ಎಂದರು.
ಪಟ್ಟಣದ ಶಿವಮೊಗ್ಗ ವೃತ್ತದಿಂದ ತಿರಂಗಾಯಾತ್ರೆ ಆರಂಭವಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿರಂಗಾಯಾತ್ರೆಗೆ ಚಾಲನೆ ನೀಡಿದರು.ಮಾಜಿ ಸೈನಿಕರು ಹಾಗೂ ಎನ್ ಸಿಸಿ ವಿದ್ಯಾರ್ಥಿಗಳು ತಿರಂಗಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಿರಂಗಾಯಾತ್ರೆ ಸಂಚರಿಸಿತು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ಉಪಾಧ್ಯಕ್ಷೆ ರೂಪಾ ಮಂಜುನಾಥ್ ಪಾರಿವಾಳ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗುಂಡ, ಮಾಜಿ ಅಧ್ಯಕ್ಷರಾದ ಲಕ್ಷ್ನಿ ಮಹಾಲಿಂಗಪ್ಪ, ರೇಖಾಬಾಯಿ ಮಂಜುನಾಥ್ ಸಿಂಗ್, ಕೆ.ಜಿ. ವಸಂತಗೌಡ್ರು, ಮುಖಂಡರಾದ ಸಂಕ್ಲಾಪುರ ಹನುಮಂತಪ್ಪ, ಹುಲ್ಮಾರ್ ಮಹೇಶ್, ದೂದಿಹಳ್ಳಿ ಬಸವರಾಜ್, ಎ.ಬಿ. ಸುಧೀರ್, ನಿವೇದಿತಾ ರಾಜು, ಭಾಗ್ಯ, ಗಿರೀಶ್ ಧಾರವಾಡ ಬೆಣ್ಣೆ ಪ್ರವೀಣ್, ವೀರನಗೌಡ, ಬೆಂಕಿಯೋಗೀಶ್, ನಾಗೀಹಳ್ಳಿ ಗಣೇಶ್, ಲೋಹಿತನಾಯ್ಕ, ವೀರೇಶ್, ವಿನಯ್, ಮಾಜಿ ಸೈನಿಕರಾದ ನಾಗೇಂದ್ರಪ್ಪ, ಕಪ್ಪನಹಳ್ಳಿ ಬಸವರಾಜ್, ಮಹಾಲಿಂಗಪ್ಪ, ಶಂಕರನಾಯ್ಕ ಮತ್ತಿತರರು ತಿರಂಗಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
Leave a comment