ಶಿಕಾರಿಪುರ ಲೈವ್:
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮಹನೀಯರನ್ನು ನಾವು ಸ್ಮರಿಸಬೇಕು ಎಂದು ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಸಲಹೆ ನೀಡಿದರು.
ಪಟ್ಟಣದ ಆಶ್ರಯ ಬಡಾವಣೆಯಲ್ಲಿರುವ
ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಡಾ.ರಾಜ್ ಕುಮಾರ್ ದತ್ತಿ ಹಾಗೂ ಜೋಗಿಹಳ್ಳಿ ಹಸನ್ ಸಾಬ್ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕನ್ನಡ ಭಾಷೆಯ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಬೇಕು. ಕನ್ನಡ ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು. ವಿದ್ಯಾರ್ಥಿಗಳು ಕಥೆ,ಕವನ ಕಾದಂಬರಿ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಾವು ಕರ್ತವ್ಯ ಮಾಡುವ ಸ್ಥಳದಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು. ಕನ್ನಡ ಸಾಹಿತ್ಯ ಪರಿಷತ್ ನಾಡು ನುಡಿ ಉಳಿಸಿ ಬೆಳೆಸಲು ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.
ವರನಟ ಡಾ.ರಾಜ್ ಕುಮಾರ್ 200ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಭಾಷೆ ಬಗ್ಗೆ ಅಭಿಮಾನ ಹೊಂದಿದ ಡಾ.ರಾಜ್ ಕುಮಾರ್ ಗೋಕಾಕ್ ಚಳುವಳಿ ಹೋರಾಟದಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದರು. ಜಾನಪದ ಸಾಹಿತ್ಯ ಮಾನವ ಕುಲದ ಆರಂಭದಿಂದಲೇ ಬೆಳೆದು ಬಂದ ಸಾಹಿತ್ಯವಾಗಿದೆ. ಅತ್ಯಂತ ವೈಶಿಷ್ಟವಾದ ಸಾಹಿತ್ಯ ಜಾನಪದ ಸಾಹಿತ್ಯವಾಗಿದೆ ಎಂದರು.
ಡಾ.ರಾಜ್ ಕುಮಾರ್ ಜೀವನ ವಿಷಯ ಕುರಿತು ಶಿಕ್ಷಕ ಎನ್.ವಿ. ಶಿವಕುಮಾರ್ ಮಾತನಾಡಿ, ಕುಟುಂಬ ಸದಸ್ಯರೆಲ್ಲ ಕುಳಿತು ವೀಕ್ಷಿಸುವಂತಹ ಚಲನ ಚಿತ್ರಗಳಲ್ಲಿ ಡಾ. ರಾಜಕುಮಾರ್ ಅಭಿನಯಿಸಿದ್ದರು. ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಸೇರಿದಂತೆ ಹಲವು ಚಲನಚಿತ್ರಗಳನ್ನು ವೀಕ್ಷಿಸಿ ಕೆಲವು ಪ್ರೇಕ್ಷಕರು ಜೀವನದಲ್ಲಿ ಬದಲಾವಣೆಯಾಗಿದ್ದರು. ಎಂದು ಶ್ಲಾಘಿಸಿದರು.
ಜಾನಪದ ಸಾಹಿತ್ಯ ವಿಷಯ ಕುರಿತು ಶಿಕ್ಷಕ ಎಂ.ಪಿ. ಷಣ್ಮುಖಪ್ಪ ಮಾತನಾಡಿ, ಜಾನಪದ ಸಾಹಿತ್ಯ ಹಲವಾರು ತಲೆಮಾರುಗಳಿಂದ ಬಂದ ಸಾಹಿತ್ಯವಾಗಿದೆ. ಜಾನಪದ ಸಾಹಿತ್ಯ ಕಾಲತೀತವಾಗಿದೆ. ಜಾನಪದ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ನಾವು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಜಾನಪದ ಗೀತೆ ಗಾಯನ ಹಾಗೂ ಡಾ.ರಾಜ್ ಕುಮಾರ್ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಎಸ್. ರಘು ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್. ಹುಚ್ರಾಯಪ್ಪ. ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಬಿ. ಪಾಪಯ್ಯ, ದತ್ತಿ ಕಾರ್ಯಕ್ರಮ ಸಂಚಾಲಕರು ಹಾಗೂ ವಿದ್ಯಾರ್ಥಿ ನಿಲಯ ಪಾಲಕರಾದ ಮಂಜುನಾಥ್ ಬಾಳೂರು, ಎಸ್. ರವಿಕುಮಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾದ ಬನ್ನೂರು ಮಂಜಪ್ಪ, ಲೋಕೇಶ್ ಮಕ್ರಿ ಉಪಸ್ಥಿತರಿದ್ದರು.
Leave a comment