ಶಿಕಾರಿಪುರ ಲೈವ್:
ಜುಲೈ 25ರಿಂದ ಆಗಸ್ಟ್.24ರವರೆಗೆ ಪಟ್ಟಣದ ವಿರಕ್ತಮಠ ಹಾಗೂ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶ್ರಾವಣದಲ್ಲಿ ಶ್ರವಣಾನುಭವ ಕಾರ್ಯಕ್ರಮ ನಡೆಯಲಿದೆ ಎಂದು ವಿರಕ್ತಮಠದ ಚನ್ನಬಸವ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿ ಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ.25ರಂದು ಸಂಜೆ 6.30ಕ್ಕೆ ಪಟ್ಟಣದ ದೊಡ್ಡಪೇಟೆ ನಿವಾಸಿ ವೀರಬಸಪ್ಪ ಶೆಟ್ರು ಗೊಜನೂರು ಅವರ ನಿವಾಸದಲ್ಲಿ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಆ.24ರಂದು ವಿರಕ್ತಮಠದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಾನ್ನಿಧ್ಯವನ್ನು ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಅತಿಥಿಗಳಾಗಿ ಸಂಸದ ಜಗದೀಶ್ ಶೆಟ್ಟರ್ ಪಾಲ್ಗೊಳ್ಳಲಿದ್ದಾರೆ ಎಂದರು.
ಬಸವಾಧಿ ಶರಣರ ಸಾಹಿತ್ಯ ಒಂದು ವರ್ಗಕ್ಕೆ ಮಾತ್ರ ಸೀಮಿತ ಅಲ್ಲ. ಎಲ್ಲ ವರ್ಗದವರಿಗೂ ತಲುಪಬೇಕು. ಈ ಶರಣರ ಸಾಹಿತ್ಯವನ್ನು 15 ವರ್ಷದಿಂದ ಶ್ರಾವಣದಲ್ಲಿ ಶ್ರವಣಾನುಭವ ಕಾರ್ಯಕ್ರಮದ ಮೂಲಕ ಎಲ್ಲ ವರ್ಗದ ಜನರ ಮನೆಗೆ ತಲುಪಿಸುತ್ತಿದ್ದೇವೆ. ಪ್ರಸ್ತುತ ವರ್ಷ ಕಾರ್ಯಕ್ರಮದಲ್ಲಿ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕಣಿವೆಮನೆ ಶಶಿಧರ್ ಸ್ವಾಮಿ, ಗೌರವಾಧ್ಯಕ್ಷ ಸುಭಾಷ್ ಚಂದ್ರಸ್ಥಾನಿಕ್,
ಮಠದ ಭಕ್ತರಾದ ಆರ್. ಜಯಣ್ಣ, ಮಹೇಶ್ ಗೊಜನೂರು ಉಪಸ್ಥಿತರಿದ್ದರು.
Leave a comment